ನನ್ನದಲ್ಲದ ಕವಿತೆ

ಎಂ.ಎಸ್.ಶ್ರೀರಾಮ್

ಕೀರ್ತನೆ



ಕೆ.ವಿ.ತಿರುಮಲೇಶ್


[ಕನ್ನಡ]
ಯನ್ನ ತಲೆಯನ್ನ ಸೋರೆ ಮಾಡಿ
ಯನ್ನ ನರಗಳನ್ನ ತಂತಿ ಮಾಡಿ
ನಿನ್ನ ಸ್ವರೂಪವನ್ನ ಯನ್ನಿಂದ ಧ್ವನಿಸಿ
ಗೊಂಬೆಯಾಟವಯ್ಯಾ ಎಂದು ಕುಣಿಸಿ
ಮಣಿಸಿ ದಣಿಸಿ
ದಾಸರ ದಾಸ ಚಪ್ರಾಸಿ ಮಾಡ್ಕೋ
ತಲೆಮೇಲೆ ಕೂತ್ಕೋ
ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೋ
ರೋಡಿಗೆ ಹಾಕ್ಕೋ
ಓಡ್ಸು ಅದರ ಮೇಲೆ ನಿನ್ನ ಇಂಪಾಲಾ
ಯನ್ನ ಚರ್ಮವ ಚಪ್ಪಲಿ ಮಾಡ್ಕೋ
ಹಾಕಿಕೋ ತುಳ್ಕೋ
ಖಂಡವಿದೆಕೋ ಮಾಂಸವಿದಿಕೋ
ಬೇಕಾದ್ರೆ ಬೇಯಿಸ್ಕೋ
ಉಂಡು ತೇಗು ಕ್ಕೊಕ್ಕೋ
ತಗೋ ಯನ್ನ ಮೂಳೆ
ನಿನ್ನ ತ್ರಾಣಕ್ಕೆ ಒಳ್ಳೇದು
ಸೂಪು ಮಾಡಿ ಕುಡೀ.

Labels: , , ,

Friday, June 13, 2008

ಜಿಗಿತ



[ತೆಲುಗು]


ಗಂಜ್ ಲಾಕಪ್ಪಿನಿಂದ
ಹುಣ್ಣಿಮೆಗೆ ಮೊದಲು ಕಾಣುವುದಿಲ್ಲ ಚಂದ್ರ
ಕಗ್ಗತ್ತಲ ದಿನಗಳಲಿ ಮಾತ್ರ
ಕಂಬಿ ಸರಳುಗಳೆದುರು
ಜೈಲು ಗೋಡೆಗಳ ದಾಟಿ, ಲೈವ್ ವಯರುಗಳ ಮೂಲಕ
ಆಕಾಶದತ್ತ ಆಸೆಯಿಂದ ನೋಡುತ್ತಾ ಕೂತರೆ
ಬೆಳುದಿಂಗಳ ಸುದ್ದಿಯಂತೆ ಉದಯಿಸುವನು ಚಂದ್ರ

ಲಾಕಪ್ಪಿನಲ್ಲಿ ಬೆಳುದಿಂಗಳು ಕಣ್ಣಿಗೆ ಕಟ್ಟಬೇಕೆಂದರೆ ಮಾತ್ರ
ಕರೆಂಟು ಹೋಗಲೇಬೇಕು
ಆಗ ಎಲೆಗಳ ಮೇಲಣ ಹಸುರೂ ಬೆಳುದಿಂಗಳೇ
ಹೂವಿನೊಳಗಣ ಪರಾಗವೂ ಬೆಳುದಿಂಗಳೇ
ನೆಲವೆಲ್ಲಾ ಬೆಳುದಿಂಗಳೇ

ಆಕಾಶವೊಂದು ಮೌನ ಸಂಗೀತದಂತೆ
ಕಡೆಗೆ ಗಲ್ಲುಗಂಭವೂ ಬೆಳುದಿಂಗಳ ಮೆಲುಕುಹಾಕುವಂತೆ!
ಚೆಲ್ಲಿದೆಯೇ ಬೀಸಿದೆಯೇ ಬೆಳುದಿಂಗಳು
ಜೋತಾಡುತ್ತಿದೆಯೇ ಗಲ್ಲುಗಂಭಕ್ಕೆ
ನನ್ನೂಹೆಯೊಳಗಣ ಸೌಂದರ್ಯವಾಗಿ
ಆವರಿಸಿದೆಯೇ ಭೂಮ್ಯಾಕಾಶಗಳನು

ಉಹುಂ.. ಅನುಭವ ಬಿಟ್ಟು ಬೇರೇನೂ ವಿಶ್ಲೇಷಣೆ ಹೊಂದದು ಬೆಳುದಿಂಗಳಿಗೆ

ಗಂಜ್ ಲಾಕಪ್ಪಿನಲ್ಲಿ
ಕರೆಂಟು ಹೋದ ಹೊರತು ಕಾಣುವುದಿಲ್ಲ ಬೆಳುದಿಂಗಳು
ಗಂಜ್ ಲಾಕಪ್ಪಿನಲ್ಲಿ
ಕಗ್ಗತ್ತಲ ದಿನದ ಹೊರತು ಕಾಣಿಸದು ಚಂದ್ರ
ಯಾವುದು ಮೊದಲು ಹೇಳಿ ಯಾವುದಾಮೇಲೆ ಹೇಳಿದರೂ
ಹೇಗೆ ತಲೆಕೆಳಗು ಮಾಡಿದರೂ
ಬಂಧನದಲ್ಲಿ ಸ್ವಾತಂತ್ರ ಅರಿವಾದಂತೆ
ಕಗ್ಗತ್ತಲೆಯ ಬಿಟ್ಟು ಬೆಳುದಿಂಗಳು
ನಿನ್ನ ಚೈತನ್ಯದಲ್ಲಿ ಹರಿಯದು

ಸಣ್ಣ ಮಿಂಚು: ತುಂಬು ಚಂದ್ರನಷ್ಟೇ ಅಲ್ಲ
ಹುಣ್ಣಿಮೆದಿನ ಲಾಕಪ್ಪಿನಲ್ಲಿ; ಚಂದ್ರ
ಕಣ್ಣು ತೆರೆದಷ್ಟೂ ಸಾಲದೆಂಬಂತೆ
ಕಾಣಿಸುವನು ಗಂಜ್‌ನಲ್ಲೂ

Labels: , , ,

Thursday, June 12, 2008

ಪ್ರಯೋಜನವಿಲ್ಲ



ವಿಕ್ಟರ್ ಜಸಿಂಟೋಫ್ಲೇಚಾ
[ತೆಲುಗಿಗೆ: ವರವರ ರಾವು]

ಪ್ರಯೋಜನ ಇಲ್ಲ
ನಿನ್ನ ಮನೆಯ ಕಗ್ಗತ್ತಲ ಮೂಲೆಯಲಿ ಆಳದಲ್ಲಡಗಿ
ನಿನ್ನ ಮಾತನು ಮರೆಸಿ
ನಿನ್ನ ಪುಸ್ತಕವ ಸುಟ್ಟು
ಪ್ರಯೋಜನವಿಲ್ಲ

ಲಾರಿಗಳಲಿ ರಾಶಿ ರಾಶಿ ಕರಪತ್ರ ಸೇರಿಸಿಟ್ಟು
ನಿನಗ್ಯಾರೂ ಎಂದೂ ಬರೆಯದ ಪತ್ರವ ಹಿಡಿದು
ಅವರು ನಿನ್ನ ಹಿಡಿಯಲು ಬರುವರು
ನೀನೆಂದೂ ಹೋಗದ ದೇಶಗಳ ಮುದ್ರೆಗಳೊಂದಿಗೆ
ನಿನ್ನ ಪಾಸ್ಪೋರ್ಟ್ ತುಂಬಿಬಿಡುವರು
ಯಾವುದೋ ಸತ್ತ ನಾಯಿಯಂತೆ
ನಿನ್ನನವರು ಹೊರಗೆಳೆಯುವರು
ರಾತ್ರೆ ನೀನು ಹಿಂಸೆಯೆಂದರೇನೆಂದು ತಿಳಿಯುವೆ
ಕತ್ತಲ ಕೋಣೆಯಲಿ
ಪ್ರಪಂಚದ ದುರ್ಗಂಧ ಇಡೀ ಹುಟ್ಟುವೆಡೆ

ನನ್ನ ಗೆಳೆಯ
ಹೋರಾಟದಿಂದಾಗಿ
ನಿನಗೇನೂ ಪ್ರಯೋಜನವಿಲ್ಲ

Labels: , ,

Sunday, June 08, 2008

ಕಾರಾಗೃಹದಲ್ಲಿ ಸಂಜೆ



ಫೈಜ್ ಅಹಮದ್ ಫೈಜ್


[ಉರ್ದು]

ಸಂಜೆಯೊಳಕ್ಕೆ ನಕ್ಷತ್ರಗಳು ಸುರಳಿ ಸುತ್ತುತ್ತವೆ
ರಾತ್ರೆಯ ಮೆಟ್ಟಿಲುಗಳು ಮೇಲಿಂದ ಇಳಿಯುತ್ತವೆ
ಯಾರೋ ಪ್ರೀತಿಯ ಬಗ್ಗೆ ಮಾತಾಡಿದ ಹಾಗೆ
ಗಾಳಿ ಸಮೀಪಕ್ಕೆ ಬಂದು, ಹಾಗೆಯೇ ಮುಂದಕ್ಕೆ ಬೀಸುತ್ತದೆ
ಚಾವಡಿಯಲ್ಲಿನ ಮರಗಳು ಆಕಾಶಕ್ಕೆ
ಕಸೂತಿಯ ಹೊದಿಕೆ ಹೊದ್ದಿಸುವಲ್ಲಿ
ಮಗ್ನರಾಗಿರುವ ಹೊರನಾಡಿಗರು.

ಸೂರು ಹೊಳೆಯುತ್ತದೆ, ಚಂದ್ರ ತನ್ನ
ಕೈಗಳಿಂದ ಧಾರಾಳವಾಗಿ ಬೆಳಕು ಚೆಲ್ಲುತ್ತಾನೆ
ನಕ್ಷತ್ರಗಳ ಭವ್ಯತೆ ಧೂಳಿನೊಂದಿಗೆ ಸೇರುತ್ತದೆ
ನೀಲಿ ನಕ್ಷತ್ರವನ್ನು ತೀಡಿ ಬೆಳಕು ಬೆಳ್ಳಿಯಾಗಿಸುತ್ತದೆ
ಎಲ್ಲ ಮೂಲೆಗಳಲ್ಲೂ ನೆರಳು ಬೆಳೆದು ದೊಡ್ಡದಾಗುತ್ತದೆ
ವಿರಹದ ಅಲೆಯಲ್ಲಿ
ಹೃದಯವು ಎದ್ದೆದ್ದು ಪುಟಿಯುವಂತೆ

ಹೃದಯ ಹಿಂದಿರುಗುವ ವಿಚಾರವಿದೇನೆ -
ಜೀವನ, ಈ ಕ್ಷಣಕ್ಕೆ, ಸಿಹಿಯಾಗಿದೆ
ಬೇಕಿದ್ದರೆ ಪಿತೂರಿಕಾರರು ವಿಷವನ್ನು ತಯಾರಿಸಲಿ
ಅವರಿಗೆಂದೂ ಸಫಲತೆ ಸಿಗುವುದಿಲ್ಲ
ಪ್ರೇಮಿಗಳ ಕೋಣೆಯಲ್ಲಿ
ಅವರು ಬೆಳಕನ್ನು ಊದಿ ದೀಪವನ್ನು ನಂದಿಸಬಹುದು
ಆದರೆ ಚಂದ್ರನನ್ನು ಅಳಿಸಿಹಾಕುವುದಕ್ಕೆ ಸಾಧ್ಯವೇ?


Labels: , ,

Sunday, March 23, 2008

ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳು



ಯಶವಂತ ಚಿತ್ತಾಲ



[ಕನ್ನಡ]
ಲಬಸಾಗಳು


ಬಾಂದ್ರಾದಲ್ಲಿ ಬ್ಯಾಂಡ್‍ಸ್ಟ್ಯಾಂಡಿನ ಬಂಡೆಗಳು ಪ್ರಖ್ಯಾತ.
ಹಬ್ಬಿಕೊಂಡಿದೆ ನೆಲದ ಈ ತುದಿಯಿಂದ ಸಮುದ್ರ ದಂಡೆಗೆ ಹತ್ತ
ಕಣ್ಣು ಹಾಯುವ ಆ ತುದಿಯವರೆಗೂ. ಕಪ್ಪಗೆ ಗಟ್ಟಿ
ಕಬ್ಬಿಣದ ಹಾಗೆ. ಉಕ್ಕಿನಂಥಹ ಪಾಷಾಣದ ಕಲ್ಲು ಹಾಸಿಗೆ
ಹಾಸಿ ಮಲಬಿವೆ ತೆಪ್ಪಗೆ ಉದ್ದೋ ಉದ್ದಕ್ಕೆ.

ಸಹಸ್ರಾರು ವರ್ಷಗಳ ಹಿಂದೆ ಎದ್ದು ಬಂದುವಂತೆ
ಭೂಗರ್ಭದ ಆಳದಿಂದ. ನಿಗಿ ನಿಗಿ ಉರಿಯುವ ಕುಂಡದಿಂದ.
ಬರುವಾಗಲೇ ಬೆಂಕಿಯ ಉಂಡೆಗಳಾಗಿ, ಹೊತ್ತು ಸಿಡಿಯುವ
ಕೆಂಡಗಳಾಗಿ. ಮುಂದೆ ಬಹಳ ಮುಂದೆ ಬಂಡೆಗಳಾಗಿ ತಣ್ಣಗಾದುವಂತೆ

ಕಂಡವರಿಲ್ಲ ಯಾರೂ ಈ ತಣ್ಣಗಾಗುವ, ಅಗ್ನಿಶಿಖೆ
ಶಿಲೆಯಾಗಿ ಆರುವ ನಿಗೂಢ ಪ್ರಕ್ರಿಯೆಯನ್ನು
ಕಂಡವ ಹಾಗೇ ಹೇಳುತ್ತಾರೆ. ಅಳೆಯುತ್ತಾರೆ ಕೂಡ ಈ
ಇಳಾಸಂತತಿಯ ಹೆರೆಯವನ್ನು, ಜನ್ಮ ಕೊಟ್ಟವಳದೇ
ಜನ್ಮ ತಾರೀಖನ್ನು ಅಳೆದೇ ಕಂಡುಹಿಡಿಯುವ ನಿಷ್ಣಾತರು! ಬರೇ
ಕಲ್ಲಲ್ಲವಂತೆ: ಕಾಲಾಂತರದಲ್ಲಿ ಗಟ್ಟಿ ಹೆಪ್ಪುಗಟ್ಟಿದ ಕಾಲ
ಪ್ರವಾಹದ್ದೇ ತೊರೆ, ಬಂಡೆಯೆಂದರೆ!




ಕಂಡವರೂ ಇದ್ದರಂತಲ್ಲ ಕಲ್ಲಿನಲಿ ದೇವರ ರೂಪವನ್ನು?
ವಿಶ್ವದ ಭವ್ಯ ರೂಪವನ್ನು ಕಲ್ಪಿಸಿಯೇ ಮೈಮರೆತ
ಅದ್ಭುತರು, ಒಂದಾನೊಂದು ಕಾಲದಲ್ಲಿ?

ಶಿವನಾತ್ಮಲಿಂಗ, ಚತುರ್ಭುಜ ವಿಷ್ಣು, ಧ್ಯಾನ ನಿಮಗ್ನ ಗೌತಮ ಬುದ್ಧ,
ಆಕಾಶದೆತ್ತರಕೆ ಬರಿ ಮೈಯಲ್ಲಿ ತಲೆಯೆತ್ತಿ ನಿಂತ ಗೊಮ್ಮಟೇಶ್ವರ
ಲಕ್ಷೋಪಲಕ್ಷ ಇಂಥ ದಿವ್ಯ ಚೇತನರನ್ನು ಶಿಲೆಯಿಂದ ಬಿಡಿಸಿ
ಬೆಳಕಿಗೆ ತಂದು ಉಸಿರಿತ್ತ ಪುರಾತನರು!
ಎಲ್ಲಿ ಮಾಯವಾದರೋ ಯಾವ ಕಾಲದ ಎಂಥ ಕತ್ತಲಮರೆಗೆ! ದಿಕ್ಕಾ
ಪಾಲಾದರೋ ವಲಸೆ ಹೋಗಿ ಯಾವ ಕಾಣದ ನಾಡಿಗೆ? ಯಾವ ಕಾರಣಕೆ?
ಕಂಡವರಿಲ್ಲ. ಉಸಿರೆತ್ತುವ ಸ್ಥಿತಿಯಲ್ಲಿಲ್ಲ ಉಸಿರು ಪಡೆದವರೇ
ಕಲ್ಲು ಮೂರ್ತಿಯ ಹಾಗೆ ನಿಂತು ಬಿಟ್ಟಿದ್ದಾರೆ ಗಟ್ಟಿ ಅವುಡುಗಚ್ಚಿ


ಬ್ಯಾಂಡ್‌ಸ್ಟ್ಯಾಂಡಿನಲ್ಲೀಗ ಬರೇ ಎಣಿಸುವವರೇ ಹೆಚ್ಚು
ಕಂಡ್ಡದ್ದರಲ್ಲಿ ಕೈ ಹಚ್ಚಿದ್ದರಲ್ಲಿ ಅಂಕೆ ಹುಡುಕುವ ಹುಚ್ಚು
ಲಕ್ಷ ದಶಲಕ್ಷಗಳ ಮಗ್ಗಿಯೆಂದೋ ಮುಗಿಸಿ ಮನದ
ಪಾಟಿಯ ಮೇಲೆ ಕೋಟಿ ಅಬ್ಜಗಳ ಸಂಖ್ಯೆ ಗೀರುತ್ತಾರೆ
ಸಲೀಸಾಗಿ. ಕೈಬೆರಳಿನಲ್ಲೂ ಗುಣಿಸುತ್ತಾರೆ ಮೈಮರೆಯುತ್ತ
ಅಂಕೆಗಳೆದುರಿನ ಶೂನ್ಯ ಬೆಳೆವ ಪರಿಗೆ!

ತಾವೆ ಸೃಷ್ಟಿಸಿದ ಈ ಪೆಡಂಭೂತಕ್ಕೆ ಸಂಕೇತಕ್ಕೆ
ಕಲ್ಲನೂ ಮಣಿಸಿ ಸಂಖ್ಯೆಯಾಗಿಸುವ ಮತಿ ಶೂನ್ಯ
ಹವ್ಯಾಸಕ್ಕೆ ಒಡೆಯುತ್ತಾರೆ. ಮೊಳ ಕಂತ ತೂತು ಕೊರೆದು
ಬಂಡೆಯಲ್ಲಿ ಮದ್ದು ಜಡೆಯುತ್ತಾರೆ. ಫರ್ಲಾಂಗು ಉದ್ದ ಬತ್ತಿಗೆ
ಬೆಂಕಿಯಿಕ್ಕಿ ಕಿವಿ ಮುಚ್ಚಿ ಅವಿತು ಕುಳಿತಲ್ಲೇ ಬಂಡೆಯ
ಮರೆಗೆ ಲೆಕ್ಕಾ ಹಾಕುತ್ತಾರೆ ನಮ್ಮ ಕಾಲದ ಶೂರರು.

ಸಮುದ್ರ ತೀರದಲಿಂದು ಬರೀ ಸೀಳಿ ಸಿಡಿಯುವ ಸದ್ದು
ನಿಸ್ಸಹಾಯ ಆರ್ಭಾಟ ಚೀರಾಟ ಚಕ್ಕಾಚೂರು ಕಲ್ಲೊಡೆದು
ಹವಾಮಾನದಲ್ಲೆಲ್ಲ ಮಸ್ತಕಕೆ ಮತ್ತು ಹಿಡಿಸುವ ವಾಸನೆ ದಾಹ
ಮುವ್ವತ್ತು ಮಜಲುಗಳ ಗಗನ ಚುಂಬೀ ಸೌಧ ಎದ್ದು ಬರುವ
ಸೌದಾಗಿರೀ ಪರಾಕ್ರಮಕ್ಕೆ ಭದ್ರ ಬುನಾದಿ ಸಿದ್ಧಗೊಳ್ಳುವುಅ
ರುದ್ರ ರಭಸಕ್ಕೆ ಪುರಾತನ ಉದ್ಭವ ಶಿಲೆ ಛಿದ್ರ ವಿಚ್ಛಿದ್ರ.
ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳೀಗ ಈ ಕಾರಣಕ್ಕೇ ಪ್ರಸಿದ್ಧ!


[ಬ್ಯಾಂಡ್‌ಸ್ಟ್ಯಾಂಡ್: ಮುಂಬಯಿಯ ಬಂದ್ರಾದಲ್ಲಿ ಒಂದು ಜನವಸತಿ]

Labels: , , ,

Thursday, March 20, 2008

ಬೆಟ್ಟ



ನಿಸ್ಸಿಂ ಎಸಿಕೆಲ್


[ಇಂಗ್ಲೀಷ್]


ಈ ಬೆಟ್ಟ
ಮಿಕ್ಕೆಲ್ಲ ಬೆಟ್ಟಗಳಂತೆ
ಹಿಡಿತಕೆ ಸಿಕ್ಕಂತೆಯೇ ಕಾಣುತ್ತದೆ
ದೂರದಲ್ಲಿ
ಮನದಲ್ಲಿ
ಅದನ್ನು ನಿರಾಕರಿಸುವ ಕೆಚ್ಚನ್ನು
ಜೀವಕಳೆದುಕೊಳ್ಳಲು ತಯಾರಾದಾಗ ಮಾತ್ರ ತೋರಬಹುದು.

ದೂರದಿಂದ ಬೆಟ್ಟವನೋಡಿ
ಮಂಡಿಗೆ ಹಾಕಬೇಡ
ದೂರವಿಲ್ಲವದು ಕಣ್ಣಿಗೆ
ದೂರವಿಲ್ಲ ಏರಲು
ದೂರವಿಲ್ಲ ಆಟವಾಡಲು

ಬೆಟ್ಟ ಬಯಸುವುದು
ಮಾನವನ ಶಕ್ತಿ
ತನ್ನೆಲ್ಲ ಅಂಕು ಡೊಂಕುಗಳಿಂದ
ಕಡಿದಾದ ಬಂಡೆಗಳಿಂದ
ಮೊಳೆತ, ಅರಳಿದ ವನ್ಯ ಹೂವುಗಳ
ಸೂರ್ಯನತ್ತ ನುಗ್ಗಿ ಮುನ್ನೆಡವ
ಕ್ಷಣದಲ್ಲಿ ಉರಿದು ಬಾಡುವ ಶಕ್ತಿ

ಇತರರಿಗೆ ಹೇಳಿದ್ದನ್ನು
ನನಗೆ ನಾನೇ ಎಷ್ಟುಬಾರಿ ಹೇಳಿಕೊಳ್ಳಬೇಕು:
ನಿನ್ನನ್ನೇ ನೀನು ನಂಬು -
ಹಾಸಿಗೆಯಲ್ಲಾದರೂ, ಮಾತಿನಲ್ಲಾದರೂ
ನಿನ್ನ ಲಯ ನಿನಗೆ ಸಿಗುವುದು

ಜೀವಕ್ಕೆ ಜೋತುಬೀಳುವುದನ್ನು
ಕಲಿತಾಗ
ಬದುಕೇನು?
ಅಸ್ತಿತ್ವವೇನು?
ನಾನು ಕವಿತೆಯ ಮಾತಾಡುತ್ತಿಲ್ಲ
ನಾನಾಡುತ್ತಿರುವುದು ದಿಟ್ಟತನದಿಂದ ಬದುಕುವ ಮಾತು
ಅದನ್ನು ನಾವು ಚಟುವಟಿಕೆ ಎಂದು ಕರೆಯಬಹುದು
ಆ ಚಟುವಟಿಕೆಯನ್ನೂ ಮಾಡಿ ಮುಗಿಸು
ಆ ಬೆಟ್ಟವನ್ನು ಪ್ರೀತಿಸದೇ ವಿಧಿಯಿಲ್ಲ

ಆ ಬೆಟ್ಟದ ಮೇಲೆ ನೀನಿಲ್ಲವೆಂಬ
ಅಸಹನೆ, ಸೇಡಿನ ಭಾವ ನಿನ್ನಲ್ಲಿರಲಿ
ಕರುಣೆಯಿರಬಹುದು ಆದರೂ
ನಿನ್ನನ್ನು ನೀನೇ ಇಲ್ಲಿ ಕ್ಷಮಿಸಬೇಡ
ಒಪ್ಪಿಗೆ ಅಥವಾ ಹತಾಶೆಗೆ ಕೈಚೆಲ್ಲಿ
ಆರಾಮವಾಗಿರಬೇಡ
ತಾನು ಸಾಯುತ್ತಿರುವಾಗ
ಮನುಷ್ಯ ನಗುತ್ತಿರುವುದಿಲ್ಲ
ಒಳ್ಳೆಯ ಸಾವಿನಲ್ಲಿ ನೀನು
ಮತ್ತೊಂದು ಕಾಲಘಟ್ಟಕ್ಕೆ ಯಾನ ಮಾಡುವೆ
ಅದುವೆ ಬೆಟ್ಟ
ನೀನೆಂದೆಂದೂ ಅರಿತಿದ್ದೆನೆಂದು ಭಾವಿಸಿದ್ದ
ಬೆಟ್ಟ

Labels: , , ,

Wednesday, February 13, 2008

ಬುದ್ಧಿವಂತರಿಗೆ ಕನಸು ಬಿದ್ದರೆ



ಎ.ಕೆ.ರಾಮಾನುಜನ್


[ಕನ್ನಡ]

ಪ್ರಾಚೀನ ಚೀನದಲ್ಲಿ ಬುದ್ಧಿವಂತ
ಒಬ್ಬನಿಗೆ ಪ್ರತಿರಾತ್ರಿ
ಕನಸು.

ಪ್ರತಿರಾತ್ರಿ ಮುಸುಂಬಿ-
ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ
ಸೇವಂತಿಗೆ
ಸೇವಂತಿಯಿಂದ ನೈದಿಲೆಗೆ
ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ
ಕನಸು.

ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ
ಮನುಷ್ಯನೋ
ಚಿಟ್ಟೆಯೋ
ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
ರಾತ್ರಿಯ ಕನಸೋ

ತಿಳಿಯದೆ ಭ್ರಮೆ ಹಿಡಿಯಿತು

Sunday, April 08, 2007

ಕವಿತಾವೇಶ



ಕೆ.ಪಿ.ಪೂರ್ಣಚಂದ್ರ ತೇಜಸ್ವಿ


[ಕನ್ನಡ]

"ಎದ್ದೇಳಿ ಎಚ್ಚರಗೊಳ್ಳಿ"
ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ

"ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!
ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ
ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.
ಕವಿವ ಕಾಳರಾತ್ರಿಯ ಕೋಳ
ಕಾಣದೇ ಮರುಳ."

"ಉತ್ತರದ ಗಡಿಯ ನೆತ್ತರಿನ ಹೊನಲ
ಬಿತ್ತರದ ರಣಕಹಳೆ ಹೊಯ್ಲುಗಳ
ಕಂಡು ಕೇಳದ ನೀವು; ಕೀಟಗಳಿರಾ
ಎದ್ದೇಳಿ ಎಚ್ಚರಗೊಳ್ಳಿ"

ಎಂದಂದು ಬಾನುಲಿಯಲ್ಲಿ ಗಟ್ಟಿ
ಚೆಕ್ಕಿಗೊಂದು ರುಜು ಹೆಟ್ಟಿ
ಮಲಗಿದನು ಕವಿಯು
ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿಯು.

Friday, April 06, 2007

ಹಳಿಗಳ ಮೇಲೆ



ಜಯಂತ ಕಾಯ್ಕಿಣಿ

[ಕನ್ನಡ]

ಹಳಿಯ ಮೇಲೆ ಕೂತಿದ್ದಾಳೆ ಅವಳು ತುಂಡು
ವಸ್ತ್ರದಲ್ಲಿ ಕಬ್ಬಿಣದ ಬಾಲ್ಟಿಯಿಂದ ನೀರೆರೆಯುತ್ತಾ ತಲೆಗೆ
ತಿಕ್ಕುತ್ತ ತುಂಡು ಅವಯವ ಸುರಿಯುವ ಮಳೆಯಲ್ಲಿ
ಎರಡೂ ಕಡೆ ಸದ್ದಿಲ್ಲದೆ ಬಂದು ಗಕ್ಕನೆ ನಿಂತಿವೆ
ಜನದಟ್ಟಣೆಯ ಧಡೂತಿ ರೈಲುಗಳು. ಡಬ್ಬಿ ತುಂಬ
ಕಂಬಿ ಹಿಡಿದು ಕೋಳಕ್ಕೆ ಜೋತ ಕೈಗಳು

ಎತ್ತಿದ ಅವಳ ಕಂಕುಳಿಂದ ಹೊರಬಿದ್ದಿದೆ ಹುಲಿಮರಿ
ಅತ್ತಿತ್ತ ಸುಳಿದು ನೆಕ್ಕುತ್ತ ಅವಳ ಬಡ ತೊಡೆಯ
ಕಾಯುತ್ತಿವೆ. ಸಣ್ಣ ಡಬ್ಬಗಳಲ್ಲಿ ಪರ್ಜನ್ಯ ಹಿಡಿದು
ಇದೇ ಹಳಿಗುಂಟ ಕೂತಿದ್ದಾರೆ ಗಂಡಸರು ತಲೆ ಎತ್ತಿ
ಉರಿವ ಮರ್ಮಾಂಗಗಳ ಹಿಡಿದು

ಹಳಿಗಳಲ್ಲಿ ಧ್ವನಿ ಇಲ್ಲ. ಬದಲಿಗೆ ಚಕ್ರಗಳ ಮೇಲೆ ಕಾದು ನಿಂತ
ಪಟ್ಟಣದ ನಿರ್ಲಜ್ಜ ಕಂಪನ. ಸಹಸ್ರಾರು ಮೈಲು ಓಡುತ್ತ
ಬಂದು ಹೆಸರು ಮರೆತು ನಿಂತವರ ಎದೆಗೆ
ಗೋಪುರದ ಗಡಿಯಾರ ಢಣಢಣ ಗುಂಡಿಕ್ಕಿದಂತೆ.
ಇವರ ಪ್ರಾಂತ ಎಲ್ಲಿ, ಕಾಲ ಎಲ್ಲಿ, ಮುಂಡು ಕೊಡವಿ ಎದ್ದವರು
ಹೀಗೇ ಈ ಇವಳ ತುಂಡು ಮೊಲೆಯಷ್ಟೇ ಹಗುರಾಗಿ
ತಲೆ ಕೊಡುವರು ಹಳಿಗೆ

ಮಳೆಗೆ ವಿದ್ಯುತ್ ತಂತಿಯ ಕಾಗೆ ತೊಟ್ಟು ತೊಟ್ಟಾಗಿ
ಕರಗಿ ಉರಿವ ಕಣ್ಣಿಗೆ ಇಳಿದ ಕಾಡಿಗೆ
ಕೈಕಾಲು ಅಲ್ಲಾಡದೆ ಸೆಟೆದು ಛತ್ರಿಯಂತೆ ಒತ್ತಿನಿಂತ ದೇಹಗಳ
ಡಬ್ಬಿಯ ಹೊರಗೆ ಹುಲಿಮರಿಗಳು ಓಡಿವೆ ಹಳಿಯುದ್ದಕ್ಕೂ
ಮೂಸುತ್ತ ಸರವಾಸನೆ.
ಚಲಿಸುವಂತಿಲ್ಲ ಏನೂ ಈಗ
ಇವಳ ಅಭ್ಯಂಜನ ಮುಗಿವ ತನಕ, ಮುಗಿಯಿತೋ
ಘಮಘಮಿಸುವ ಅವಳನ್ನು ಹಳಿಗಳ ಮೇಲೇ ಮಲಗಿಸಿ
ಒಬ್ಬೊಬ್ಬರಾಗಿ ಎಲ್ಲರೂ ಹರಿದು ಹೋಗುವ ತನಕ

Friday, March 09, 2007

ಸಮುದ್ರ



ವರವರರಾವು


[ತೆಲುಗು]
ಐದು ಖಂಡಗಳಿಂದ
ನಾಲ್ಕೂ ದಿಕ್ಕುಗಳಿಂದ
ಓಡೋಡಿ ಬಂದೆವು
ಉದಯಿಸುವ ಸೂರ್ಯನೇ
ಅಲೆಯಂತೆ ಎದ್ದೆವು
ಉದಯಿಸುವ ಸೂರ್ಯನೇ
ಚಳವಳಿಯ ತಂದೆವು
ಉದಯಿಸುವ ಸೂರ್ಯನೇ

ಜಲಸಮುದ್ರಗಳು ನಾಲ್ಕೇ
ಜನಸಮುದ್ರಗಳೈದು

Wednesday, March 07, 2007

ಬಜೆಟ್ಟು



ಎಚ್. ಡುಂಡಿರಾಜ್

[ಕನ್ನಡ]

ವಿತ್ತ ಸಚಿವರ
ಒಂದು ಕರದಲ್ಲಿ
ಬಡವನ ಜುಟ್ಟು,
ಇನ್ನೊಂದು ಕರದಲ್ಲಿ
ಕತ್ತರಿ ಕೊಟ್ಟು
ಬಿಟ್ಟರಾಯಿತು ಅದೇ
ವಾರ್ಷಿಕ
ಬಜೆಟ್ಟು

Wednesday, February 28, 2007

ಮೈಸೂರಿನಲ್ಲಿ ದಸರೆ



ಗೋಪಾಲಕೃಷ್ಣ ಅಡಿಗ



[ಕನ್ನಡ]

ಮೈಸೂರು ಮೊದಲಿನಂತಿದೆಯೆ? ಇದೆ - ಅದೇ
ಬಾನು: ಮೋಡದ ಪರದೆ ಸರಿಸಿ ಚುಚ್ಚಿ ಮುಚ್ಚಿ ತಂಪೆರೆದು ಕಣ್ಣೀರು
ಮಳೆಗರೆವ ನೀಲಿ ಕಮಾನು, ಸೂರು, ಚಾಮುಂಡಿ ಬೆಟ್ಟವೂ
ಇದೆ - ಮೆಟ್ಟಿಲು ಮೆಟ್ಟಿಲನ್ನೆಣಿಸಿ ಹತ್ತಿ ಹತ್ತಿ ಏದುಸಿರು ಬಿಡುತ್ತ
ತಾಯಿಯ ಪಾದ ಮುಟ್ಟಬೇಕಾಗಿಲ್ಲ. ಬಸ್ಸು ಕಾರುಗಳು ಮೇಲಕ್ಕೆತ್ತಿ
ಕುಕ್ಕುವುವು ಮಹಿಷಾಸುರನ ಪಾದಪಂಕಕ್ಕೆ
ಮಿಕ್ಕೆಲ್ಲವಕ್ಕೀಗ ಚಹರೆಯೇ ಬೇರೆ,
ಮೈಸೂರಿಗೆ ಈತ ಬೇರೆ ಮೋರೆ.
ಮೈಸೂರು ಮೊದಲಿನಂತಿಲ್ಲೀಗ; ಜರಿಪೇಟ,
ಲಾಂಕೋಟು, ಇಜಾರು, ಕಮ್ಮರು ಬಂಧ
ಬಿಗಿದುಕೊಂಡಿದ್ದ ಮೈಸೂರೀಗ ವಸ್ತ್ರಾಪಹರಣ
ಬದಲಾವಣೆಯ ಮುಗಿಸಿ ನಿಂತಿದೆ. ಶರ್ಟು ಪ್ಯಾಂಟುಗಳಲ್ಲಿ
ಸಡಿಲುಗೊಂಡಿದೆ ಬಿಗಿದ ತಂತಿ, ಸಯ್ಯಾಜಿರಾವ್ ರಸ್ತೆ
ದೊಡ್ಡ ಪೇಟೆಗಳಲ್ಲಿ ಅಪಸ್ವರದ ವ್ಯಭಿಚಾರಿ ಭಾವ ಸಂಚಾರ,
ಸ್ಥಾಯಿ ಎಂಬುದೇ ಇಲ್ಲಿಲ್ಲ. ತೊಣಚಿಕೊಪ್ಪಲ ವರೆಗು
ಹಿಗ್ಗಲಿಸಿ ಚಾಚಿಕೊಂಡಿದೆ ಮೈಯ.
ದೊಡ್ಡಕೆರೆ ಇಲ್ಲ. ಕಾರಂಜಿ ಕೆರೆಯೂ ಮಾಯ.
ಹೆಜ್ಜೆ ಹೆಜ್ಜೆಗೂ ತಂಪಿನುಪಶಮನ ನೀಡುತ್ತಿದ್ದ
ಥಂಡೀ ಸಡಕ್ಕಿಗೂ ಅಪಾಯ ಕಾದಿದೆ. ಸಂಜೆ
ವಿಹಾರಕ್ಕೆ ಕರೆದು ಕನಸಿನುದ್ಯಾನವನಗಳ ಕಲಕಿಸಿ ನಕ್ಷತ್ರಗಳ
ಹೊಟ್ಟೆಯೊಳಗಿಟ್ಟು ಕುಲುಕುತ್ತಿದ್ದ ಕುಕ್ಕರಹಳ್ಳಿ
ಕೆರೆಯಲ್ಲಿ ಕನ್ನಡಿಯಿಲ್ಲ - ರಾಕ್ಷಸಾಕೃತಿಯ ಸರ್ವಗ್ರಾಸಿ
ಜಿಗಣೆಕಳೆಗಳ ಕೆಟ್ಟ ಕನಸಿನ ಕರಾಮತ್ತು.

ಪರಂಪರೆಗೆ ಕತ್ತರಿ ಬಿದ್ದು ಚಿಂದಿ ಚಿಂದಿ ಬಿದ್ದಿದೆ ಇಲ್ಲಿ
ಸ್ಥಿರತಾರತಮ್ಯಗಳ ವಿವೇಕದ ಪುರಾಣ ಕರಾರು;
ಹೊಸ ಕರಾರಿಗೆ ಮುಕ್ತ ಹೃದಯಗಳ ಸ್ವಹಸ್ತ ಸಹಿ
ಬಿದ್ದಿಲ್ಲ. ಬರೀ ತಕರಾರು
ಮನೆಯಲ್ಲಿ, ರಸ್ತಗಳಲ್ಲಿ, ಶಾಲೆ ಕಾಲೇಜುಗಳಲ್ಲಿ, ಜನಸಭೆಯಲ್ಲಿ.
ಲಂಗುಲಗಾಮಿಲ್ಲದ ಲಫಂಗತನಕ್ಕೇ ಈಗ
ರಹದಾರಿ. ದಿಕ್ಕುಗೆಟ್ಟು ಸಜ್ಜನಿಕೆ ತಳ
ಕಿತ್ತು ಓಡುತ್ತಲಿದೆ ಹರದಾರಿ ದೂರ ದಿಕ್ಕಾಪಾಲು.



ಪ್ರಜಾತಂತ್ರದಲ್ಲೀಗ ಜನತೆಯ ದಸರೆ. ಹೊಸ ತಾರ
ತಮ್ಯ ಸೌಧಕ್ಕೆ ಬಿದ್ದಿಲ್ಲ ಇನ್ನೂ ಅಸ್ತಿಭಾರ. ಸಿಕ್ಕಾಪಟ್ಟೆ
ಸಿಕ್ಕುಸಿಕ್ಕುಗಳಲ್ಲಿ ಸಿಕ್ಕಿಕೊಂಡಿರುವ ಪುರುಷಾರ್ಥಸಂಕರದಲ್ಲಿ
ಪಶುಬಲದ ಜಗ್ಗಾಟ, ನುಗ್ಗಾಟ, ವಿಜಯೋತ್ಸಾಹ.
ಮನುಷ್ಯ ಮುಖವಾಡ ತೊಟ್ಟ ಮಹಿಷಾಸುರರೆ
ಹೆಜ್ಜೆಹೆಜ್ಜೆಗೆ. ಹೆಣ್ಣು ಹೊನ್ನು ಮಣ್ಣಿಗೆ ವೃಥಾ
ಬಾಯ್ಬಾಯ್ಬಿಡುವ ಪುಂಡ ದಂಡು. ಜೊಲ್ಲು ಸುರಿಸುತ್ತಿರುವ ಶುನಕ
ಹುಡುಕುತ್ತಲೇ ಇದೆ ಬೀದಿಯುದ್ದಕ್ಕು ತಿಂಡಿಯ ತುಣುಕ;
ನೆಗೆದಾಡುತ್ತಲಿದೆ ಹುಚ್ಚೆದ್ದು ಗಲ್ಲಿಗಲ್ಲಿಯಲ್ಲಿ ಮಣಕ.
ಎಂಜಲೆಲೆಗಾಗಿ ಹೋರಾಡುತ್ತಲಿವೆ ನೋಡಿ ಹೋರಿ, ತಿರುಕ.

ಕನ್ನಂಬಾಡಿಯಲ್ಲಿ ಬರೀ ನೀರಲ್ಲ; ಬೆಳಕಲ್ಲ; ಸಂಗೀರ
ಧಾರೆ ಮುಲುಕುವ ಚಿಲುಮೆ;
ದೊಡ್ಡಕೆರೆಯಲ್ಲಿ ವಸ್ತು ವಸ್ತ್ರ ವೇಷಾಂತರ ಪ್ರದರ್ಶನದ
ನರವಾನರರ ಚೇಷ್ಟೆ. ಗಮ್ಮತ್ತು, ಹೋಟಲುಗಳಲ್ಲಿ
ಸಿನೆಮಾ ಮಂದಿರಗಳಲ್ಲಿ, ಬಾರುಗಳಲ್ಲಿ ಮನಸ್ಸೇ ಸತ್ತ
ಮಾನವಾಭಾಸಗಳ ಅಟ್ಟಹಾಸದೆ ಕೇಕೆ, ಚೀರು, ಕೋಲಾಹಲ.
ಅರಮನೆಗೆ
ವಿದ್ಯುದ್ದೀಪದತ್ಯುಗ್ರ ಅಲಂಕಾರಗಳ ಭಾರ ವಿಕಾರ.
ರಾಜರಿಲ್ಲ, ದರಬಾರಿಲ್ಲ;
ಮುಜರೆ, ನಜರುಕಾಣಿಕೆಗಳಿಲ್ಲ;
ಸಂಗೀತ ಗೋಷ್ಠಿಗಳಿಲ್ಲ. ಅಪಸ್ವರಕ್ಕೇ ಪಟ್ಟ
ಕಟ್ಟಿದಸ್ತವ್ಯಸ್ತ ಅಧಿಕಾರದ ವಿಕಾರ.
ಮನವೆ ಖೋತಾ ಆದ ಮಂದಿ ಮಂದಿ ಮಂದೆಯ ಮುಂದೆ
ಸ್ಥಿರಚಿತ್ರ, ವೇಷಾಂತರ, ಆನೆಕುದುರೆಗಳ, ಒಂಟೆಗಳ, ಸಿಪಾಯಿಗಳ
ತುಕಡಿತುಕಡಿಗಳ ಭೂತಕಾಲದ ಪ್ರೇತ, ಪ್ರೇತ,
ಜಂಬೂಸವಾರಿ.



ಮೈಸೂರಿನೊಳಗೆ ಏತಕ್ಕೇನು ಕಡಿಮೆ?
ಮೇಲಕ್ಕೆ ಕೆಳಕ್ಕೆ ಜಗ್ಗುವುದು ಮಾನಸಯಂತ್ರ;
ಕಾಲೇ ಕಂಭ, ದಪ್ಪ ದಪ್ಪ ತೊಗಲಿನ ಡೇರೆ
ವಾತಾಯನಗಳಿವೆ, ನವದ್ವಾರ ಬಂಧ,
ತಲೆಬುರುಡೆಯೊಳಗೊ ಸುಯೋಜಿತ ಸೂಕ್ಷ್ಮ ಸೂಕ್ಷ್ಮ ತಂತು ತಂತು
ಮಿಂಚಿನ ಗೂಡು; ಗರ್ಭಗುಡಿಯಲ್ಲಿ ಬರಿ
ಜಿರಳೆ, ಜೇಡ, ಚೇಳು ಹಾವುಗಳ ಹಿಂಡು,
ಶೂನ್ಯವಾಗಿದೆ ಒರಲೆ ಹತ್ತಿರುವ ಮಂದಾಸನ,
ನಂದಿ ಹೋಗಿರುವ ನಂದಾದೀಪ. ನಿರ್ಮಾಲ್ಯಗಳ ಗಬ್ಬು ನಾತ;
ಶೂನ್ಯ ಸಿಂಹಾಸನವ ಏರುವಾತನು ಯಾರು?
ಆರು ವೈರಿಗಳೊಳಗೆ ಭಾರಿ ತಕರಾರು,
ಬರಸುತ್ತಲಿದ್ದಾರೆ ಹೊಸ ಕರಾರು.
ಸೂರ್ಯಮಂಡಳದಿಂದ, ನೀಹಾರಿಕೆಗಳಾಚೆ ಕಡೆಯಿಂದ
ಕ್ಷೀರ ಸಾಗರದ ಕಿರುದೆರೆಗಳುರುಳಿಂದ,
ಹೃದಯಾಂತರಾಳದ ಅಂತಸ್ಫೂರ್ತಿ ಕಿಡಿಯಿಂದ
ಬರಬಹುದು, ಬರುವನೇ ವಿವೇಕಭೂಪಾಲ?
ಆಗಲೇ ಮೈಸೂರು ಸರ್ವಥಾ ಸ್ವಸ್ಥ;
ಹೊಸತಾರತಮ್ಯಕ್ಕೆ ಪ್ರಾಣಪ್ರತಿಷ್ಠೆ;
ಮಾನವತ್ವಕ್ಕೆ ತೋರುವುದು ಹೊಸ ಬಟ್ಟೆ
ಆಗ ಮಾತ್ರವೆ ಸಾರ್ಥಕ ನವ ವಿಜಯದಶಮಿ -
ಇಲ್ಲವಾದರೆ ನಮ್ಮ ಮೈಸೂರು ದಸರೆ
ವ್ಯರ್ಥ ಹಳವಂಡಕ್ಕೆ ಇನ್ನೊಂದು ಹೆಸರೇ

೧೯೮೩

Wednesday, February 21, 2007

ಪದ



ಟೋನಿ ಹೋಗ್ಲಂಡ್
[ಇಂಗ್ಲೀಷ್]

ಈ ದಿನ ಮಾಡಬೇಕಾದ
ಕೆಲಸಗಳ ಕಾಟುಹಾಕಿದ
ಯಾದಿಯಂತ್ಯದಲ್ಲಿ

ಹಸಿರು ದಾರ ಮತ್ತು
ಹೂಕೋಸುಗಳ ನಡುವೆ ನೀನು
ಬೆಳಕಿನ ಕಿರಣ ಅಂತ ಬರೆದಿರುವೆ

ಆ ಪುಟದಲ್ಲಿ ಆರಾಮವಾಗಿರುವ ಆ ಪದ
ಸುಂದರವಾಗಿದೆ, ನಿನ್ನನ್ನು ತಟ್ಟುತ್ತದೆ -
ನಿನ್ನ ಗೆಳೆಯನ ಅಸ್ತಿತ್ವದಂತೆ.

ಮತ್ತು ಬೆಳಕಿನ ಕಿರಣ ಆ ಗೆಳೆಯ
ದೂರದೂರಿನಿಂದ ಕಳಿಸಿದ ಉಡುಗೋರೆಯಂತೆ -
ಈ ಮುಂಜಾನೆ ನಿನ್ನನ್ನು ಖುಷಿಪಡಿಸಲು ಬಂದಂತಿದೆ

ನಿನ್ನೆಲ್ಲ ಕರ್ತವ್ಯಗಳ ನಡುವೆ
ಖುಷಿಯೂ ಅವಶ್ಯ
ಎಂದು ನೆನಪಿಸುವಂತಿದೆ

ಅದನ್ನೂ ಸಾಧಿಸಬೇಕು.
ನೆನಪಿದೆಯೇ?
ಸಮಯ ಮತ್ತು ಬೆಳಕು

ಪ್ರೀತಿಯ ಮಾದರಿಗಳು
ಮತ್ತು ಪ್ರೀತಿಯೂ ಕಾಫಿ ಯಂತ್ರದಷ್ಟೇ
ಅಥವಾ ಕಾರಿನಲ್ಲಿರುವ ಸ್ಟೆಪ್ನಿಯಷ್ಟೇ

ಉಪಯುಕ್ತವಾದದ್ದು,
ಅವಶ್ಯವಾದದ್ದು. ನಾಳೆ ಏನು ಕಾದಿದೆಯೋ
ತಿಳಿದವರು ಯಾರು?

ಆದರೆ ಈ ದಿನ ದೇಶಾಂತರ ಹೊರಟ
ಹೃದಯದಿಂದ ತಾರು ಬಂದಿದೆ
ಸಂಸ್ಥಾನ ಇನ್ನೂ ಇದೆ

ರಾಜನೂ ರಾಣಿಯೂ ಇನ್ನೂ ಇದ್ದಾರೆ
ಸೂರ್ಯನ ಬೆಳಕಿನಲ್ಲಿ ಕೂತು
ಕೇಳಿಸಿಕೊಳ್ಳಲು ಸಮಯವಿರುವ

ಯಾವುದೇ ಮಕ್ಕಳೊಂದಿಗೆ ಅವರು
ಮಾತಾಡುತ್ತಲೂ ಇದ್ದಾರೆ
ಅಂತ ಆ ತಾರಿನಲ್ಲಿದೆ.

Friday, February 09, 2007

ಪವಾಡ



ಲಿಯೋನಿಡ್ ಮಾರ್ಟಿನೋವ್
[ರಷ್ಯನ್, ಇಂಗ್ಲೀಷ್ ಅನುವಾದ: ಪೀಟರ್ ಟೆಂಪೆಸ್ಟ್]

ಆ ಬೆಚ್ಚಂಬೆವರಿನ ರಾತ್ರೆ
ನಾನು ದೇವರೊಂದಿಗೆ ಮಾತಾಡುತ್ತಿದ್ದೆ
ದೇವರು ಹೆಚ್ಚೇನೂ ಹೇಳುತ್ತಿಲ್ಲ ಅನಿಸುತ್ತಿತ್ತು
"ನನಗೊಂದು ಪವಾಡ ಮಾಡಿ ತೋರಿಸು!"
ಹೀಗೆಂದು ಪ್ರಾರಂಭಿಸಿದೆ.

ಆತ ಉತ್ತರಿಸಿದ:
"ಮಗೂ, ನೋಡು ನಿನ್ನ ಕೂದಲು ಬೆಳ್ಳಗಾಗುತ್ತಿಲ್ಲ,
ಅದು ಉದುರುತ್ತಲೂ ಇಲ್ಲ! ಹಾಗೆ ನೋಡಿದರೆ ನಿನ್ನ ಕೈ ಕಾಲುಗಳೂ
ಸವೆದು ಸಣ್ಣಗಾಗಿಲ್ಲ. ನೀನು ತೊಂದರೆಗಳ ಎಷ್ಟು ಭಾರ
ಹೊರುತ್ತಿದ್ದೀಯೆಂದು ನನಗೆ ಗೊತ್ತು, ಆದರೂ.
ನೀನು ಚಲಿಸುತ್ತಿರುವ ಪಥದತ್ತ ಒಮ್ಮೆ ತಿರುಗಿ ನೋಡು
ಎಂಥೆಂಥ ಕಡಿದಾದ ಹಾದಿಯನ್ನು ನೀನು ಕಣ್ಮುಚ್ಚಿ ಕ್ರಮಿಸಿದ್ದೀಯ
ಆ ದಾರಿಯಲ್ಲಿ ಮಂಜೂ ರಕ್ತದಷ್ಟೇ ಕಡುಕೆಂಪಾಗಿ, ಉಪ್ಪಾಗಿತ್ತು.
ಈ ದಾರಿ ಕ್ರಮಿಸಿ ಬಂದಿರುವುದೇ ಒಂದು ಪವಾಡವಲ್ಲವೇ ಮಾನವಾ?
[೧೯೪೯]

Sunday, January 28, 2007

ಕುಂಟೋಬಿಲ್ಲೆ



ಎ.ಕೆ.ರಾಮಾನುಜಮ್
[ಕನ್ನಡ]

ಇದು ಚದುರಂಗ
ಅಲ್ಲ, ಮನೆಹಿಂದಿನ ಸಂದಿ
ಯ ಕುಂಟೋಬಿಲ್ಲೆ.

ಎರಡುಕಾಲಿನ ಇಡೀದೇಹ
ಮನೆಯಿಂದ ಮನೆಗೆ ಚಾಪುಹಾಕಿ
ಅದನ್ನರಸಿ ಕುಂಟುತ್ತ ಒದ್ದು

ಆಚೆದಡ ಮುಟ್ಟಿ ಒಂದು ಗಳಿಗೆ ಮಾತ್ರ
ಎರಡೂಕಾಲು ಊರಿ ವಿರಾಮ ಕಂಡು
ಥಟ್ಟಂತ ತಿರುಗಿ ಒಂಟಿಕಾಲಿನಲ್ಲಿ

ಹೊರಟಲ್ಲಿಗೇ ಮತ್ತೆ ತವರಿಗೆ
ಬಂದು ಸೇರುವ - ಗಂಡಸ್ತನ
ಬಲಿಯುವ ಮೊದಲು ಗಂಡು

ಮಕ್ಕಳು ಕೂಡ ಮೈಮರೆತು
ಆಡುವ - ಹೆಣ್ಣುಮಕ್ಕಳ
ಮೈನೆರೆಯುವಾಟ.
ನಮ್ಮ ಮನೆ

ಸಂದಿಯ ಈ ಆಟವನ್ನೇ
ಆಫ್ರಿಕದಲ್ಲಿ ಜರ್ಮನಿಯಲ್ಲಿ ಕಂಡು
ಆಶ್ಚರ್ಯವಾದರೂ ಬಾಂಬು ಪೋಲಿಯೋ
ಇತ್ಯಾದಿ ವಕ್ರಿಸಿದ ಕಾಲಿದ್ದರೆ
ಕಪ್ಪು ಬಿಳಿ ಹಳದಿ ಮೈ ಎಲ್ಲ
ಆಡುವುದು ಎಲ್ಲೆಲ್ಲೂ ಕುಂಟೋಬಿಲ್ಲೆ

ಆಟವೇ ಅಂತ ಅನಿಸಿ
ಪಕ್ಕದ ಮನೆಯಲ್ಲಿ ಆಫ್ರಿಕ
ಎದುರು ಮನೆಯಲ್ಲಿ ಜರ್ಮನಿ

ಚಿಕ್ಕಂದು ಮುಕ್ಕಿದ ಬೀದಿ ಮಣ್ಣಲ್ಲಿ ವಿಶ್ವ
ರೂಪ ಕಂಡಹಾಗಾಗಿ ಒಂದು ನಿಮಿಷ
ತಬ್ಬಿಬ್ಬಾಯಿತು.

Saturday, January 27, 2007

ಎಲ್ಲಿ?



ಅಸದುಲ್ಲಾ ಖಾನ್ ಘಾಲಿಬ್
[ಉರ್ದು]

ನನ್ನಾಶಯಗಳೆಲ್ಲಾ ಮಣ್ಣಾಗಿದೆ
ದಾರಿ ಕಾಣದ ಕಣ್ಣಾಗಿದೆ

ಸಾವು ಬರಬೇಕಾದಾಗ ತಾನೇ ಬರುವುದು
ಆದರೆ ನಿದ್ದೆ ಯಾಕೆ ಬರದಿರುವುದು?

ನನ್ನ ನೋಡಿ ನಾನೇ ನಗುತ್ತಿದ್ದೆ
ಈಗ ನಗುವೂ ಇಲ್ಲ, ಇಲ್ಲ ನಿದ್ದೆ

ಭಕ್ತಿ-ಭಜನೆ ಒಳ್ಳೆಯದೇ, ಗೊತ್ತು
ಆದರೆ ಅದಕ್ಕೂ ಇಲ್ಲ ಉತ್ಸಾಹ, ಈ ಹೊತ್ತು

ಎಲ್ಲಕ್ಕೂ ನನ್ನಿಂದ ಬರೇ ಮೌನ
ಇಲ್ಲವೇ, ಮಾತೇ ಬರುವುದಿಲ್ಲವೇನ?

ನನ್ನ ಹೃದಯದ ಗಾಯ ಕಾಣದಿದ್ದರೇನು?
ಬೆಂದ ಹೃದಯದ ವಾಸನೆ ಬರಲಿಲ್ಲವೇನು?

ನನ್ನ ಬಗ್ಗೆ ನನಗೇ ತಿಳಿಯದ ಹಾಗೆ,
ನೋಡಿಸ್ವಾಮಿ ನಾನಿರೋದೇ ಹೀಗೆ

Wednesday, October 18, 2006

ಮೈಕೆಲೇಂಜೆಲೋ



ಕಾಜಿಮೀರ್ಜ್ ವೀರ್‍ಜಿನ್‍ಸ್ಕಿ
[ಪೋಲಿಷ್, ಅನುವಾದ:ತೇಜಸ್ವಿನಿ ನಿರಂಜನ, ಜಿಡಿಸ್‍ಲಾ ರೆಷೆಲ್ಯೂಸ್ಕಿ]

ಯೂರೋಪು ಖಂಡದ ಆತ್ಮವೇ ನಡುಗಿದ ಕಾಲವದು
ಮೈಕೆಲೇಂಜೆಲೋ
ಗೋಲದ ಕೆಳಗೆ
ರೋಮಿನಲ್ಲಿ
ದೇವರ ಹತ್ತಿರ
ಗಾರೆಯವನ ತೊಟ್ಟಿಲಲ್ಲಿ ತೂಗುತ್ತ
ಆರಾಧನಾ ಮಂದಿರ, ಛತ್ತು, ಗೋಡೆಗಳ ಮೇಲೆ
ಚಿತ್ರ ಬಿಡಿಸಿದ

ಕೆಳಗೆ ಬಗ್ಗಿ
ಆತ ನೋಡಿದ
ಜಗಳಾಡುವ ಜನರನ್ನು
ಘೋರ ಯುದ್ಧಗಳನ್ನು:
ಮೇಲಿನಿಂದ ಗಟ್ಟಿಯಾಗಿ ಹೇಳಿದ:
"ಶಾಂತಿ! ಶಾಂತಿ!
ಇಲ್ದಿದ್ರೆ ನನ್ನ ಕುಂಚವನ್ನು ಕೆಳಕ್ಕೆಸೆದು
'ಜಗತ್ತಿನ ಸೃಷ್ಟಿ'ಯನ್ನು ನಿಲ್ಲಿಸೇನು!"

Tuesday, October 17, 2006

ಕಾಶೀಗ್ ಹೋದ ನಂ ಬಾವ



ಕೈಲಾಸಂ
[ಕನ್ನಡ]

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೇ ಪರದೇಲಿ

ತಂಗಿ ಯಮುನಾದೇವಿಯವಳ
ಸಂಗವಾಯ್ತೆಂದುಬ್ಬಿ ಉಬ್ಬಿ
ಗಂಗಾದೇವಿ ಉಕ್ಕಿ ಉಕ್ಕಿ
ಬೀಸಿ ಬೀಸಿ ದೋಣಿ ಕುಕ್ಕಿ
ಬಾವ ಅತ್ತು ಬಿಕ್ಕಿ ಬಿಕ್ಕಿ
ಬಂಡೆತಾಕಿ ದೋಣಿ ಒಡ್ದು
ಸೊಳ್ಳೆ ಪರದೆ ಬಾವನ್ ಬಡ್ದು
ಮಂಡೆ ದವಡೆ ಪಟ್ಟಾಗೊಡ್ದು
ಕಾಶೀ ಆಸೆ ನಾಶವಾಗಿ
ಮೀಸೇ ಉಳಿದದ್ ಎಷ್ಟೋ ವಾಸೀಂತ್
ಕಾಶೀಂದ್ ಬಂದಾ ನಂ ಬಾವ

Sunday, October 15, 2006

ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ



ಬರ್ಟೋಲ್ಟ್ ಬ್ರೆಕ್ಟ್
[ಜರ್ಮನ್]

ನನ್ನ ಪುಟ್ಟಮಗ ನನ್ನನ್ನು ಕೇಳುತ್ತಾನೆ - ಲೆಕ್ಕ ಕಲಿಯಲೇಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ಎರಡು ಚೂರು
ರೊಟ್ಟಿ, ಒಂದಕ್ಕಿಂತ ಹೆಚ್ಚೆಂದು ಕಲಿಯುವಿದಕ್ಕಿಂತ ಮಿಗಿಲೇನಿದೆ?
ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ - ಫ್ರೆಂಚ್ ಭಾಷೆ ಕಲಿಯಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ಆ ರಾಷ್ಟ್ರ ಕುಸಿಯುತ್ತಿದೆ
ನಿನ್ನ ಹೊಟ್ಟೆಯನ್ನು ಕೈಯಿಂದ ಉಜ್ಜಿ ನಿಟ್ಟುಸಿರಿಟ್ಟರೆ
ಯಾವ ತೊಂದರೆಯೂ ಇಲ್ಲದೇ ನಿನಗಿದೆಲ್ಲ ಅರ್ಥವಾಗುತ್ತದೆ.
ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ - ಚರಿತ್ರೆ ಕಲಿಯಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ನಿನ್ನ ತಲೆಯನ್ನು
ಭೂಗರ್ಭದಲ್ಲಿ ಹುದುಗಿಟ್ಟರೆ ಬದುಕುವುದನ್ನ ಕಲಿಯುವೆ ಅಂತ.
ಹೌದು ಲೆಕ್ಕ ಕಲಿ ಅಂತ ನಾನವನಿಗೆ ಹೇಳುತ್ತೇನೆ,
ಜೊತೆಗೆ ಫ್ರೆಂಚ್ ಮತ್ತು ಚರಿತ್ರೆ!

Monday, October 09, 2006

ಚಂದ್ರನೊಂದಿಗೆ ಏಕಾಂತ ಕುಡಿತ



ಲಿ ಬಾಯ್
[ಮೂಲ: ಚೀನೀ. ಇಂಗ್ಲೀಷ್ ಅನುವಾದ: ವಿಕ್ರಂ ಸೇಠ್]


ಹೂಗಳ ನಡುವೆ ಮದಿರೆಯ ಕುಡಿಕೆ
ಸ್ನೇಹಿತರಿಲ್ಲದೆ ಒಬ್ಬನೆ ಕುಳಿತು,
ಲೋಟವನೆತ್ತಿ ಚಂದ್ರನ ಕರೆವೆ,
ನಾನು, ನೆರಳು, ಚಂದ್ರ, ಮೂವರ ಗುಂಪು.


ಕುಡಿಯಲು ಮಾತ್ರ ಚಂದ್ರಗೆ ಬರದು
ನೆರಳು ಮಾಡುವುದು ನನ್ನದೆ ನಕಲು
ಇಬ್ಬರ ಜೊತೆಗೂ ಖುಷಿಯನು ಪಡೆಯುತ
ಕಾಯುತಲಿರಲು ಬರುವ ವಸಂತ

ನಾ ಹಾಡುವೆ, ತೂರಾಡುವ ಚಂದ್ರ.
ನಾ ಕುಣಿವೆ - ಕುಣಿದಾಡಿತು ನೆರಳು
ಎಚ್ಚರದಲಿ ಖುಷಿಯನು ಹಂಚಿ
ತೂರಾಡುತ ಬೇರ್ಪಟ್ಟರೆ ಸುತ್ತಲು ಇರುಳು.

ತೊಡುವ ಪಣ:
ಮಾನವ ಸಂಬಂಧಗಳ ಮೀರಿ ಗೆಳೆಯರಾಗಿರಲು
ಬೆಳ್ಳಿನದಿ ಮುಗಿವಲ್ಲಿ ಮತ್ತೆ ಮತ್ತೆ ಸೇರಲು

Sunday, October 08, 2006

ಮೈ ಕೈ ಎಲ್ಲ....



ವೈ ಎನ್ ಕೆ
[ಕನ್ನಡ]

ಮೈಕೇಲ್ ಜಾಕ್‌ಸಾನ
ಎಂಥ ಹಾಡು ಹಾಡತಾನ?
ಎಂಥ ಜಾದೂ ಮಾಡತಾನ!
ಮೈ ಕೈ ಎಲ್ಲ ಜಾಡಿಸೋಣ
ಮೈ ಕೈ ಎಲ್ಲ ತಾಕಿಸೋಣ

ಹೆಣ್ಣೋ? ಗಂಡೋ? ಸಂಶಯ
ಬರಿಸುವಂಥ ದಿರಸಯ್ಯ
'ಅರಸಿ' ಯೇ 'ಅರಸ'ಯ್ಯ --
The Queen is the King
Jackson will swing

'ಥ್ರಿಲ್ಲರ್' ಕ್ಯಾಸೆಟ್ ಕೇಳಬೇಕು
ಥ್ರಿಲ್ಲರ್ ವಿಡಿಯೋ ನೋಡಬೇಕು
ಜಾಕ್‌ಸನ್‌ ಹಾಡಬೇಕು
ಹಾಡೊದನ್ನ ನೋಡಬೇಕು

ಮೈ ಕೈ ಎಲ್ಲ ತಾಕಿಸೋಣ
ಮೈ ಕೈ ಎಲ್ಲ ಚಾಕಿಸೋಣ
ಮೈಕೇಲ್ ಜಾಕ್‌ಸಾನ

Thursday, October 05, 2006

ಅಬೀಡ್ಸಿನಲ್ಲಿ ರಸ್ತೆ ದಾಟುವುದು



ಕೆ.ವಿ.ತಿರುಮಲೇಶ್
[ಕನ್ನಡ]

ನಿಮಗೀಗ ಬುಲ್‍ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೇ?
ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ
ಆರಿಸಿದಿರಿ. ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ.
ತುಸು ತಾಳಿರಿ. ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ.
ಎಡಗಡೆಯಿಂದ ಸಾಲುಗಟ್ಟಿ ಬರುತ್ತಿರುವ ಈ ಮೋಟಾರು
ವಾಹನಗಳು ಹೋಗಿಕೊಳ್ಳಲಿ. ಬಲಗಡೆಯಿಂದಲೂ ಬರುತ್ತಿವೆ.
ಅಬೀಡ್ಸಿನಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು
ಜೇಬಿನಲ್ಲಿರಿಸಿ ಹಾಕಿಕೊಂಡಿರಬೇಕು. ನೋಡಿದಿರ,
ಆ ಡಬಲ್ ಡೆಕ್ಕರಿನ ಕಿಟಕಿಗಳು ಬುಲ್‍ಚಂದನ ಬೆಳಕುಗಳನ್ನು
ಹೇಗೆ ತುಂಡರಿಸಿ ಹೋದವು! ಆದರೆ ಅವು ಮತ್ತೆ
ಜಗಜಗಿಸುತ್ತಿವೆ. ಬುಲ್‍ಚಂದನ ಬೆಳಕುಗಳೇ ಹಾಗೆ.

ಈಗ ನುಗ್ಗಿಬಿಡಿ. ಈ ಕಾರು ಮತ್ತು ಆ ಸ್ಕೂಟರಿನ ನಡುವೆ
ರಸ್ತೆ ದಾಟಿಬಿಡುವ. ಕೇಳಿಯೂ ಕೇಳಿಸದಂತೆ ಇದ್ದ ಸದ್ದು
ಸ್ಕೂಟರಿನವನು ಬಯ್ದದ್ದು. ಪೋಲೀಸನ ಬಿಗಲಿನಂತೆ ಕಿರುಚಿದ್ದು
ಕಾರಿನ ಬ್ರೇಕು. ಅಂತೂ ದಾಟಿದ ಮೇಲೆ ಹೇಗನ್ನಿಸುತ್ತಿದೆ
ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೆ? ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ... ನಾವು ದಾಟಿಬಂದದ್ದೇ ಇಲ್ಲ
ಎಂಬಂತೆ. ಅಬೀಡ್ಸಿನ ರಸ್ತೆಗಳೇ ಹಾಗೆ.

Tuesday, October 03, 2006

ಕಣ್ ಕಂಡುಕೊಂಡದ್ದು



ಚಂದ್ರಸೇನ್
[ತೆಲುಗು]

ಕಣ್ಣು ತೆರೆದರೆ ಜನನ
ಮುಚ್ಚಿದರೆ ಮರಣ
ಮಿಟುಕಿಸಿದಷ್ಟೇ ಅಲ್ಲವೇ ಪಯಣ?

Monday, October 02, 2006

ತುಂತುರುಗಳು



ಎಚ್.ಎಸ್.ಬಿಳಿಗಿರಿ
[ಕನ್ನಡ]

ಪೋಪೋಪಡೆ ಹಿಟ್ಲರ ಪಡೆ
ಹಾಕಿದರೂ ಮಟ್ಟ
ಧೃತಿಗೆಡದಲೆ ಹೊಗೆಯುಗುಳುವ
ಚರ್ಚಿಲ್ಲನ ಚುಟ್ಟ;
ಜಡಿದರು ಮಳೆ, ಪೊತ್ತರು ಇಳೆ
ಉರಿಬಿಸಿಲಿನ ಕಾಟ
ವಿರಮಿಸುತಲಿ ಮಲಗುವ ಸೋ-
ಮಾರಿಯ ಸಿಗರೇಟ;

ಜ್ಞಾಪಿಸುವೊಲು ನಿಂತಿವೆ ಭ-
ದ್ರಾವತಿಯೊಳು, ರಮಣಿ
ಗಗವವನೆ ತಿವಿಯುವವೊಲು
ಹೊಗೆಯುಗುಳುವ ಚಿಮಣಿ!

****

ಬಿಸಿನೀರ ಕಾವಿನಿಂ-
ದವಳ ಮೊಗ ಕೆಂಪೇರಿ-
ದುದ ಕಂಡು ನನ್ನ ಮನ ಕುದಿಯಿತಲ್ಲ!
ಬಿಸಿನೀರೆ! ನೀ ಧನ್ಯ!
ಅವಳ ಮೊಗವನು ನೀನು
ಮುತ್ತಿಟ್ಟು ಕೆಂಪೇರಿಸಿರುವೆಯಲ್ಲ!

***

ಭೂತವಾದರು ಸರಿಯೆ ಮನುಜಗೆ
ಹೆದರಿ ನಿಲ್ಲದು ಅರೆಚಣ.
ಎಷ್ಟು ಧೈರ್ಯವೊ ಮೂಗ ಮೇಲೆಯೇ
ಬಂದು ಕೂರ್ವುದು ಈ ನೊಣ!

***

ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು
ಬೆಣಚುಕಲ್ಲಿನ ಗೊಂಚಲು!

***

ಮರಗಳೆಲೆಯ ನಡುವೆ ಕಾಂಬ
ತುಂಬುವೆರೆಯ ಚೆಲುವಿಗೆ
ಸಾಟಿಯೇನು ಬರಿಯ ಕಣ್ಗೆ
ತೋರ್ವ ಚಂದ್ರಮಂಡಲ?

ಒಡಲು ಕಂಡು ಕಾಣದಂಥ
ಅರ್ಧ ನಗ್ನ ಸುಂದರಿ
ಮನ ಸೆಳೆವೊಲು ಸೆಳೆವಳೇನು
ಪೂರ್ಣನಗ್ನ ರಮಣಿಯು!

Sunday, October 01, 2006

ಆತ್ಮಹತ್ಯೆ



ಹಾರ್ಹೆ ಲೂಯಿ ಬೊರ್ಹೇಸ್
[ಸ್ಪಾನಿಶ್]

ರಾತ್ರೆಯಲ್ಲಿ ಒಂದು ನಕ್ಷತ್ರವೂ ಉಳಿದಿರುವುದಿಲ್ಲ.
ರಾತ್ರೆಯೇ ಉಳಿದಿರುವುದಿಲ್ಲ.
ನಾನು ಸಾಯುತ್ತೇನೆ, ನನ್ನ ಜೊತೆಗೇ
ಪಿರಮಿಡ್ಡುಗಳನ್ನು, ಪದಕಗಳನ್ನು,
ಭೂಖಂಡಗಳನ್ನು, ಚಹರೆಗಳನ್ನು ಅಳಿಸಿಹಾಕುವೆ.
ಪೇರಿಸಿಟ್ಟ ಭೂತವನ್ನು ಅಳಿಸಿಹಾಕುವೆ.
ಚರಿತ್ರೆಯನ್ನು ಧೂಳಾಗಿಸುತ್ತೇನೆ, ಧೂಳನ್ನೂ ಧೂಳಾಗಿಸುವೆ.
ನಾನು ಕಡೆಯ ಸೂರ್ಯಾಸ್ತವನ್ನು ನೋಡುತ್ತಿರುವೆ.
ಕಡೆಯ ಹಕ್ಕಿಯ ಕಲರವ ಕೇಳುತ್ತಿರುವೆ.
ನಾನು ಯಾರೂ ಅಲ್ಲದವರಿಗೆ ಏನೂ ಇಲ್ಲವಾದ್ದನ್ನು ಬಳುವಳಿಯಾಗಿ ನೀಡಿದ್ದೇನೆ.

Wednesday, September 27, 2006

ಬರ್ಬರರ ನಿರೀಕ್ಷೆಯಲ್ಲಿ



ಸಿ.ಪಿ.ಕ್ಯವಫಿ
[ಗ್ರೀಕ್]
ಅನುವಾದ: ಬಿ.ಆರ್.ಲಕ್ಷ್ಮಣರಾವ್

ಯಾರಗಾಗಿ ಕಾಯುತ್ತಿದ್ದೇವೆ ನಾವು
ಮಾರುಕಟ್ಟೆಯಲ್ಲಿ ಸೇರಿ?

ಬರಲಿದ್ದಾರೆ ಇಂದು ಬರ್ಬರು.

ಸತ್ತಂತಿದೆಯೇಕೆ ಸಂಸತ್ತು?
ತೆಪ್ಪಗೆ ಕೂತಿದ್ದಾರೆ ಶಾಸಕರು?

ಬರಲಿದ್ದಾರೆ ಇಂದು ಬರ್ಬರರು.
ಬಂದ ಮೇಲೆ
ತಮ್ಮ ಶಾಸನಗಳ ತಾವೇ ರಚಿಸುವರು.

ಚಕ್ರವರ್ತಿಯೇಕೆ ಎದ್ದಿದ್ದಾನೆ ಇಷ್ಟು ಬೇಗ?
ಕೂತಿದ್ದಾನೆ ನಗರದ ಮಹಾದ್ವಾರದಲ್ಲಿ
ಸಿಂಹಾಸನದ ಮೇಲೆ
ಮುಕುಟ ಪೀತಾಂಬರಧಾರಿಯಾಗಿ?

ಬರಲಿದ್ದಾರೆ ಇಂದು ಬರ್ಬರರು.
ಕಾದಿದ್ದಾನೆ ಚಕ್ರವರ್ತಿ
ಅವರ ಮುಖಂಡನನ್ನು ಸ್ವಾಗತಿಸಲು,
ಸತ್ಕರಿಸಲು
ಬಿನ್ನವತ್ತಳೆ ಬಿರುದು ಬಾವಲಿ ನೀಡಿ.
ಸಿಂಗಾರಗೊಂಡು ಹೊರಟಿದ್ದಾರೇಕೆ
ನಮ್ಮ ದಂಡಾಧಿಕಾರಿ ದ್ವಯರು
ರಂಗು ರಂಗು ಚಿತ್ತಾರಗಳ
ಉತ್ತರೀಯ ತೂಗಿ,
ಝಗಝಗ ನವ ರತ್ನ ಖಚಿತ
ಉಂಗುರ, ಕೈ ಕಡಗ, ಕವಚ,
ಭುಜ ಕೀರ್ತಿಗಳ ಮೆರೆದು?

ಬರಲಿದ್ದಾರೆ ಇಂದು ಬರ್ಬರರು
ಅವರ ಕಣ್ಣು ಕೋರೈಸುವುದು
ಇಂಥ ಒಡವೆ ತೊಡವು.

ನಮ್ಮ ಸನ್ಮಾನ್ಯ ವಾಗ್ಮಿಗಳೆಲ್ಲಿ ಪತ್ತೆಯಿಲ್ಲ
ತಮ್ಮ ಮಾಮೂಲು ಪರಾಕು ಮೊರೆಯಲು?

ಬರಲಿದ್ದಾರೆ ಇಂದು ಬರ್ಬರರು,
ಅವರಿಗೆ ಭೈರಿಗೆ ಎಂದರಾಗದು.

ಇದ್ದಕ್ಕಿದ್ದಂತೆ ಇದೇಕೆ ಚಡಪಡಿಕೆ, ಗೊಂದಲ?
ಜನರ ಮೋರೆಗಳೇಕೆ ಕಪ್ಪಿಟ್ಟಿವೆ?
ಹಾದಿ ಬೀದಿಗಳೆಲ್ಲ ಖಾಲಿಯಾಗುತ್ತಿವೆಯಲ್ಲ!
ಏಕೆ ಹಿಂತಿರುಗುತ್ತಿದ್ದಾರೆ ಮಂದಿ
ತಮ್ಮ ಮನೆಗಳಿಗೆ?

ಕತ್ತಲಿಳಿಯುತ್ತಿದೆ, ಬರ್ಬರರು ಬರಲಿಲ್ಲ,
ಸುದ್ದಿ ಬಂದಿದೆ ನಮ್ಮ ಗಡಿಗಳಿಂದ
ಎಲ್ಲೂ
ಇಂದು ಬರ್ಬರರೇ ಇಲ್ಲವೆಂದು.

ಬರ್ಬರರೇ ಇಲ್ಲವೇ? ಅಯ್ಯೋ
ಇನ್ನೇನು ನಮ್ಮ ಗತಿ?
ಅವರಾದರೂ ಪರಿಹಾರದಂತಿದ್ದರು ನಮಗೆ
ಒಂದು ರೀತಿ!!

Tuesday, September 26, 2006

ಆಃ



ಶ್ರೀ ಶ್ರೀ
[ತೆಲುಗು]

ಬೆಂಕಿಯುಗುಳುತಾ
ಆಕಾಶಕ್ಕೆ ನಾ ಹಾರಿಹೋದರೆ
ಅತ್ಯಾಶ್ಚರ್ಯದಿಂದ ಇವರು....

ರಕ್ತಕಕ್ಕುತಾ
ನೆಲದೆಡೆಗೆ ನಾನುರುಳಿಹೋದರೆ
ನಿರ್ದಾಕ್ಷಿಣ್ಯವಾಗಿ ಇವರೇ.....

Monday, September 25, 2006

ಆ ದಿನ



ವರವರರಾವು
[ತೆಲುಗು]

ಹೇಳದೇ ಬಂದೆನೆಂದಲ್ಲ,
ಹೇಳಬೇಕಾದ್ದು ಎಂದಿಗೂ ಉಳಿದಿರುತ್ತದೆ
ಊಹಿಸದೇ ನಡೆದದ್ದು ಎಂದೂ ಅಲ್ಲ
ಊಹಿಸಿದ್ದು ನನ್ನನುಕೂಲಕ್ಕೇ ನಡೆವುದೆಂದು
ಯಾವಾಗಲೂ ಏನೋ ಒಂದು ಆಸೆ
ಯಾವ ವಾಕ್ಯವೂ ಅರ್ಧಕ್ಕೆ ನಿಂತಿಲ್ಲ
ಯಾವ ಕೆಲಸವೂ ನಿಂತುಹೋಗಿಲ್ಲ
ಯಾವ ಅನುಭವವೂ ಅರ್ಧಕ್ಕೇ.....

ಸಮಸ್ಯೆ ಅದಲ್ಲವೇ ಅಲ್ಲ
ಅಲ್ಲಿ ಕಾಲ ನಿಲ್ಲಲಿಲ್ಲ
ಕಾಲ ಮನವ ತೆರೆದಿಟ್ಟಿತು
ಅಷ್ಟೇ

ಸಿಹಿಕಹಿಗಳ
ಭೇದವನಳಿಸಿಹಾಕಲು
ನಾವು ದಿನದಿನವೂ ನಿದ್ರೆ ಕೆಡಿಸಿಕೊಂಡೆವು
ಗುಬ್ಬಿಗೂಡಲಿ, ರೆಕ್ಕೆಗಳಲಿ
ಹುದುಗಿದ ಇಪ್ಪತ್ತು ಹೇಮಂತಗಳ
ಉಗುರುಬಚ್ಚನೆ ಅನುಭವ
ಒಂದು ಕಹಿವಾಸ್ತವದಲ್ಲಿ ಕರಗಿ...
ನಾಳೇಯೇ ಹೊರಡಬೇಕೇ ಎಂದೆನ್ನುವಷ್ಟರಲ್ಲಿ
ಬೆಳಗಿಗಾಗಲೇ ನಾಳೆ ಇಂದಾಗಿದೆ.

ಅರೇ ಆಗಲೇ ಕರೆದೊಯ್ಯುವಿರಾ
ಎಂದು ನೀನಾತಂಕಪಡುವಾಗ
ನಿನ್ನ ಕಣ್ಣೆದುರಿಗೇ
ನನ್ನ ಕೈಗಳಿಗೆ ಬೇಡಿ

ದೃಶ್ಯವನು
ಲಘುದೀರ್ಘ ಚತುರತೆಯಲಿ
ಕತ್ತರಿಸಿದ "ಜಾಲೀ ಮುಲಾಕಾತ್" ನಿಂದ
ನಿಂತುಬಿಟ್ಟ ಮಾತು
ಕಣ್ಣ ಮೀರಿದ ಹನಿಯಾಗಿ
ಕಂಡರೆ ಕರುಣೆಯಿಂದ ಕಾಣುವೆ
ಎಸ್ಕಾರ್ಟ್ ವ್ಯಾನ್ ಗುರ್ರೆನ್ನುವುದು
ಧೂಳೆಬ್ಬಿಸುವುದು
ವಾಸನೆ ಅಡರುವುದು
ನೋಟ ಒಳಕ್ಕಿಟ್ಟುಕೊಂಡರೆ
ಖಾಕಿ ಬಟ್ಟೆಗಳೂ, ರೈಫಲ್‌ಗಳೂ
ನೋಡುತ್ತಿರುತ್ತವೆ.
ಮನಸು ಛಿಲ್ಲೆನ್ನುವುದು
ಸಿಟ್ಟಾಗುವುದು
ಪೆಟ್ರೋಲ್ ವಾಸನೆಯಲಿ
ಹೊಟ್ಟೆಯೊಳಗಿನ ನರ ಮೌನವಾಗಿ ಕನಲುವುದು
ನಿಮ್ಮಿಂದ ಬಂದ ಹೊರಪ್ರಪಂಚದ
ನೋಟವ
ಒಳ ಪ್ರಪಂಚದೊಳಗಣ ನಿಮ್ಮೊಳಕ್ಕೆ ತಿರುಗಿಸುವೆ.


ಕಾಲಕ್ಕೂ ನನಗೂ ಎರಡೇ ಕಾಲು
ಹಗಲು - ರಾತ್ರೆ
ಸ್ವಲ್ಪ ಬೇಗ ನಡೆಯ ಬೇಕೆಂಬ ಆಸೆಯಲಿ
ಕಾಲ ಸೆಕೆಂಡುಗಳ ಏದುಸಿರು ಹಿಡಿದು
ನಾನು ಲೇಖನಿ ಹಿಡಿದು
ಸಾಗುತ್ತಲೇ ಇರುತ್ತೇವೆ
ಸಾಗಿಸುತ್ತಲೇ ಇರುತ್ತೇವೆ

ಶತ್ರುವಿಗೆ ನಾಲ್ಕು ಕಂಗಳಿವೆ
ಟೆಲಿಕಿವಿ, ಟೆಲಿದೃಷ್ಟಿ, ವಯರ್‌ಲೆಸ್‌ ಬಾಯಿದೆ
ಆಯುಧಗಳ ಕೈಗಳಿವೆ
ಎಲ್ಲಕ್ಕಿಂತ
ತಾನೊಬ್ಬನೇ ಬದುಕಬೇಕೆಂಬ ಮಹದಾಸೆಯಿದೆ
ಅದಕ್ಕೆಂದೇ
ಹೃದಯವನ್ನ ಕೊಂದ
ಅದಕ್ಕೆಂದೇ ಹೃದಯ ಸ್ಪಂದನವ ಕೊಂದ--
ಹೃದಯವಿಲ್ಲದವರಲ್ಲಿ
ಯಾವ ಭಾಷೆ ಆಡುವುದು!

ಬೇಟೆ ನಾಯಿ ಜೋತಾಡುವು ನಾಲಿಗೆ,
ಕತ್ತಿನ ಬೆಲ್ಟು
ಧುಮುಗುಡುವ ಮಾಲೀಕನ ಕೈಲಿರುವ ಹಂಟರ್
ಎಲ್ಲವೂ ತನ್ನ ಅಂತಸ್ತೆಂದುಕೊಳ್ಳುವುದು
ಭಾವಕ್ಕೆ ಸಂಕೋಲೆ ಹಾಕುವುದು - ಅಪರಾಧವೆಂದು
ಯಾವ ಭಾಷೆಯಲಿ ಹೇಳುವುದು?

ಆಸ್ತಿ
ಮಾನವ ಪ್ರಪಂಚವನ್ನು
ಕಾವಲುಗಾರರಾಗಿ, ಅಪರಾಧಿಗಳಾಗಿ ಹಂಚಿಬಿಟ್ಟಿತು
ನಾನು ಆ ಅದನ್ನೇ ತೆಗೆದುಹಾಕುತ್ತೇನೆಂದರೆ
ಆ ಆಸ್ತಿಯ ಕಟಕಟಯಲಿ ಅಪರಾಧಿಯಾಗಿ
ಕಾಮಾಲೆ ಕಂಗಳಿಗೆ ಕಮ್ಯುನಿಸ್ಟನಂತೆ
ಅದಕ್ಕಿಂತ ದೊಡ್ಡ ಆರೋಪವೇ ಇಲ್ಲವಂತೆ
ಆತ ನನ್ನನ್ನು ನಕ್ಸಲೈಟ್ ಎನ್ನುವನು

ಅದೇ ಸತ್ಯವಾಗುವಂತೆ ನಾವು ನಿರೀಕ್ಷಿಸೋಣ
ಜನಕ್ಕಾಗಿ ನಾವು "ರಾಜದ್ರೋಹ" ಎಸಗೋಣ


any forcible separation from loved ones is of course very painful. But even worse is the sense of utter helplessness. There is nothing we can do about it. Such a person feels that there was something unsaid, a sentence cut in the middle, a melody abruptly stopped. It now feels as if even a minute's re-union would enable the undaid to be said, the sentence or the melody completed. If only... if.... if...
Ngugi [Detained: A Writer's Prison Dairy]

Sunday, September 24, 2006